24 X 7 Helpline No: 1916
For safer cleaning of septic tanks/ sewers 14420

ಮಳೆ ನೀರು ಕೊಯ್ಲು

  • Home >
  • ಮಳೆ ನೀರು ಕೊಯ್ಲು

ನಗರಗಳಲ್ಲಿ ಮಳೆ ನೀರು ಕೊಯ್ಲು ಎಂದರೆ ಮಹಡಿಯ ಮೇಲಿನ ಛಾವಣಿಯ ಮೇಲೆ ಬೀಳುವ ಮಳೆನೀರನ್ನು ಸಂಗ್ರಹಿಸುವುದು, ಶೋಧಿಸುವುದು ಮತ್ತು ಅದನ್ನು ಉಪಯೋಗಿಸುವ ಪ್ರಕ್ರಿಯೆಯಾಗಿದೆ. ಮಳೆನೀರು ಕೊಯ್ಲುನ್ನು 3 ವಿಧಾನಗಳಲ್ಲಿ ಅನುಸರಿಸಬಹುದು. ಅವೆಂದರೆ: ಮನೆಯ ಹತ್ತಿರುವ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸುವುದು, ಅಂತರ್ಜಲ ಮೂಲಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಉಪಯೋಗಕ್ಕಾಗಿ ಮಳೆ ನೀರನ್ನು ಸಂಗ್ರಹಿಸುವುದು. ಕೊಳವೆಬಾವಿಗಳ ಪುನಶ್ಚೇತನ: ಕೊಳವೆಬಾವಿಗಳ ಪುಶ್ಚೇತನವನ್ನು ಅವುಗಳು ಪೂರ್ತಿ ಒಣಗುವುದನ್ನು ತಪ್ಪಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈಗೊಳ್ಳಬಹುದು. ಅದನ್ನು ಸಾಮಾನ್ಯವಾಗಿ ಈ ರೀತಿಯಾಗಿ ಮಾಡುತ್ತಾರೆ. ಮೊದಲು, ಕೇಸಿಂಗ್ ಪೈಪಿನ ಸುತ್ತ ಒಂದು ಗುಂಡಿಯನ್ನು ತೋಡಬೇಕು ಮತ್ತು ಅದರೊಳಗೆ ಸಿಮೆಂಟ್ ರಿಂಗ್‍ಗಳನ್ನು ಅಳವಡಿಸಬೇಕು ಗುಂಡಿ ಸುತ್ತಳತೆ ಒಂದು ಮೀಟರ್‍ನಷ್ಟಿದ್ದು 10 ಅಡಿ ಆಳವಾಗಿರಬೇಕು. ಹಳ್ಳದ ತಳದಲ್ಲಿ, ಫಿಲ್ಟರ್ ತೂತುಗಳನ್ನು ಮಾಡಿ, ಸ್ಟೀಲ್ ಮೆಶ್‍ವುಳ್ಳ ಕೇಸಿಂಗ್ ಪೈಪ್‍ನ್ನು ಕೊಳವೆಬಾವಿಯ ಪೈಪಿಗೆ ಗಟ್ಟಿಯಾಗಿ ಅಳವಡಿಸಬೇಕು. ಈ ಕೇಸಿಂಗ್ ಪೈಪ್ ಜರಡಿಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗುಂಡಿಯ ತಳದವರೆಗೆ ಕೊಳವೆಬಾವಿಯ ವ್ಯಾಸದ ಅಳತೆಗೆ ಸರಿಹೊಂದುವ ಸಿಮೆಂಟ್ ರಿಂಗ್‍ಗಳನ್ನು ಅಳವಡಿಸಬೇಕು. 2 ಅಡಿ ಎತ್ತರದವರೆಗೆ ಗುಂಡಿಯನ್ನು ದೊಡ್ಡ ಕಲ್ಲುಗಳಿಂದ ತುಂಬಬೇಕು. 2 ಅಡಿಯ ಮತ್ತೊಂದು ಪದರವನ್ನು 40 ಎಂಎಂ ಜೆಲ್ಲಿ ಕಲ್ಲುಗಳಿಂದ ತುಂಬಬೇಕು. ಮೂರನೇಯ ಪದರವನ್ನು 20 ಎಂಎಂ ಅಳತೆಯ ಜೆಲ್ಲಿ ಕಲ್ಲುಗಳಿಂದ ತುಂಬಬೇಕು. ನಾಲ್ಕನೇ ಪದರವನ್ನು ಇದ್ದಲಿನಿಂದ ತುಂಬಬೇಕು. ನೆಲಮಟ್ಟದಿಂದ 3 ಅಡಿ ಜಾಗ ಇರುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರೆಸಬೇಕು. ಈ ಪದರಗಳ ಮೇಲೆ ನೈಲಾನ್ ತೆರೆಯೊಮದನ್ನು ಹಾಸಬೇಕು ಮತ್ತು ಗುಂಡಿಯ ಮಿಕ್ಕ ಭಾಗವನ್ನು ನೆಲಮಟ್ಟದಿಂದ ಒಂದಡಿ ಇರುವವರೆಗೆ ಮರಳಿನಿಂದ ತುಂಬಬೇಕು. ತಾರಸಿಯಿಂದ ಬೀಳುವ ಮಳೆ ನೀರನ್ನು ತುಂಬಲು ಒಂದು ಪೈಪ್‍ನ್ನು ಅಳವಡಿಸಿ ಈ ಪೈಪ್ ಗುಂಡಿಗೆ ಸಂಪರ್ಕ ಹೊಂದುವಂತೆ ಮಾಡಬೇಕು. ಹೆಚ್ಚುವರಿ ನೀರು ರಸ್ತೆಗೆ ಹರಿದುಹೋಗದಂತೆ ಮಾಡಲು ಮತ್ತೊಂದು ಪೈಪ್‍ನ್ನು ಅಳವಡಿಸುವುದೂ ಉತ್ತಮ. ಈ ವಿಧಾನವನ್ನು ಅನುಸರಿಸುವುದರಿಂದ ನಮ್ಮ ಕೊಳವೆಬಾವಿಗಳನ್ನು ನಾವು ಯಶಸ್ವಿಯಾಗಿ ಮರುಪೂರಣ ಮಾಡಿ ಅವು ಸದಾ ಕಾಲ ನೀರಿನಿಂದ ತುಂಬಿರುವಂತೆ ನೋಡಿಕೊಳ್ಳಬಹುದು. ತೆರೆದಬಾವಿಗಳನ್ನು ಹೊಂದಿರುವವರೂ ಕೂಡ ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಶೋಧಿಸಿದ ಮಳೆ ನೀರು ತೆರೆದಬಾವಿಗೆ ಹರಿಯುವಂತೆ ಮಾಡಿ ತೆರೆದಬಾವಿಗಳ ನೀರಿನ ಮಟ್ಟ ಹೆಚ್ಚುವಂತೆ ನೋಡಿಕೊಳ್ಳಬಹುದು.

ಅಂತರ್ಜಲ ಮರುಪೂರಣ:

ಮನೆಯ ಅಂಗಳದಲ್ಲಿನ ಇಳಿಜಾರು ಪ್ರದೇಶದಲ್ಲಿ ಒಂದು ಇಂಗುಗುಂಡಿಯನ್ನು ನಿರ್ಮಿಸಬೇಕು.ಈ ಇಂಗು ಗುಂಡಿಯ ವ್ಯಾಸ 5 ಅಡಿಗಳಷ್ಟಿದ್ದು ಗರಿಷ್ಠ 10 ಅಡಿಗಳ ಆಳವಿರಬೇಕು. ಗುಂಡಿಯ ತಳದವರೆಗೆ ಸರಿಹೊಂದುವ ಸಿಮೆಂಟ್ ರಿಂಗ್‍ಗಳನ್ನು ಗುಂಡಿಯಲ್ಲಿ ಇಳಿಸಬೇಕು. ಗುಂಡಿಯ ತಳದಲ್ಲಿ ಜೆಲ್ಲಿ ಕಲ್ಲುಗಳನ್ನು ಹಾಸಿ ಅದನ್ನು ಒಂದು ನೈಲಾನ್ ಪರದೆಯಿಂದ ಮುಚ್ಚಬೇಕು. ಗುಂಡಿಯ ಉಳಿದ ಭಾಗಕ್ಕೆ ನೆಲಮಟ್ಟದಿಂದ ಒಮದು ಅಡಿಯವರೆಗೆ ಮರಳು ತುಂಬಬೇಕು.

ಮನೆಯ ತಾರಸಿಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲೆಂದು ಅಳವಡಿಸಿದ ಪೈಪ್‍ನ್ನು ಈ ಇಂಗುಗುಂಡಿಗೆ ಸಂಪರ್ಕಿಸಬೇಕು. ಹೆಚ್ಚುವರಿ ನೀರನ್ನು ಮಳೆ ನೀರು ಚರಮಡಿಗೆ ಹರಿದುಹೋಗುವಂತೆ ಮಾಡಲು ಮತ್ತೊಂದು ಪೈಪ್ ಅಳವಡಿಸಬೇಕು. ಹೀಗೆ ಮಳೆ ನೀರು ಚರಮಡಿಗೆ ವೃಥಾ ಹರಿದುಹೋಗುವುದನ್ನು ತಡೆದು, ಅದನ್ನು ನೆಲಕ್ಕೆ ಇಂಗುವಂತೆ ಮಾಡಿದರೆ, ಅಂರ್ಜಲವು ಸಹಜವಾಗಿಯೇ ಮರುಪೂರಣಗೊಳ್ಳುತ್ತದೆ. ಎಲ್ಲ ಬೆಂಗಳೂರಿಗರೂ ಈ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, ನಮ್ಮ ಮುಂದಿನ ಜನಾಂಗ ನೀರಿನ ಕೊರತೆಯಿಂದ ಬಳಲುವುದನ್ನು ಖಂಡಿತವಾಗಿ ತಪ್ಪಿಸಬಹುದು.

ಮಳೆನೀರಿನ ಮರುಬಳಕೆ

ಬೆಂಗಳೂರಿನಲ್ಲಿ ವರ್ಷದಲ್ಲಿ ಸರಾಸರಿ 1 ಸಾವಿರ ಮಿಲಿ ಮೀಟರ್‍ನಷ್ಟು ಮಳೆಯಾಗುತ್ತದೆ. ಈ ಸರಾಸರಿ ಒಂದು ಸಾವಿರ ಮಿ.ಮೀ ಮಳೆಯಿಂದ 40*60 ಅಳತೆಯ ನಿವೇಶನದಲ್ಲಿನ ಮನೆಯ ತಾರಸಿಯಿಂದ ಸುಮಾರು 2,23,000ಲೀಟರ್‍ನಷ್ಟು ನೀರು ಸಂಗ್ರಹಿಸಬಹುದು. ಪ್ರತಿ ಬೆಂಗಳೂರಿಗ ದಿನಕ್ಕೆ 135 ಲೀಟರ್‍ನಷ್ಟು ನೀರನ್ನು ಉಪಯೋಗಿಸುತ್ತಾನೆ ಎಂದಿಟ್ಟುಕೊಂಡರೆ 4 ಜನರ ಒಂದು ಕುಟುಂಬ ವರ್ಷಕ್ಕೆ ಸರಾಸರಿ 2 ಲಕ್ಷ ಲೀಟರ್‍ನಷ್ಟು ನೀರನ್ನು ಬಳಸುತ್ತದೆ. ಹೀಗಾಗಿ, 40*60 ಅಳತೆಯ ನಿವೇಶನದ ಮನೆಯಲ್ಲಿ ವಾಸಿಸುವ 4 ಜನರ ಸಾಧಾರಣ ಕುಟುಂಬವೊಂದಕ್ಕೆ ಬೇಕಾದ ನೀರನ್ನು ಮಳೆ ನೀರು ಸಂಗ್ರಹದಿಂದಲೇ ಪೂರೈಕೆ ಮಾಡಬಹುದು.

ಮಳೆನೀರು ಕೊಯ್ಲು ವಿಧಾನ

ತಾರಸಿಯ ಮೇಲೆ ಬೀಳುವ ಮಳೆ ನೀರು ವೃಥಾ ಹರಿದು ಚರಂಡಿಗೆ ಸೇರುವುದನ್ನು ತಪ್ಪಿಸಲು ಅದು ಒಂದು ಪೈಪ್‍ನ ಮೂಲಕ ಹಾಯುವಂತೆ ಮಾಡಬೇಕು. ಈ ನೀರನ್ನು ಶೋಧಿಸಿ, ಮಳೆ ನೀರು ಸಂಗ್ರಹಕ್ಕೆಂದು ನಿರ್ಮಿಸಲಾಗಿರುವ ಟ್ಯಾಂಕುಗಳನ್ನು ಶೇಖರಿಸಿಟ್ಟುಕೊಳ್ಳಬೇಕು. ಇಳಿಜಾರು ಮಾಡುಗಳಿರುವ ಮನೆಗಳಲ್ಲಿ ತಾರಸಿಗೆ ಪೈಪ್ ಒಂದನ್ನು ವ್ಯವಸ್ಥೆ ಮಾಡಿ ಅದು ಮಳೆ ನೀರು ಸಂಗ್ರಹ ತೊಟ್ಟಿಗೆ ಬೀಳುವಂತೆ ಮಾಡಬೇಕು. ಈ ಪೈಪುಗಳ ಮುಖಾಂತರ ಹರಿಯುವ ನೀರನ್ನು ಶೋಧಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ನೀರನ್ನು ಶುದ್ಧೀಕರಿಸಲೆಂದು ಉಪಯೋಗಿಸುವ ಫಲ್ಟರ್ ಉತ್ತಮ ಗುಣಮಟ್ಟದ್ದಾಗಿರಬೇಕು. ಸಾಮಾನ್ಯವಾಗಿ ಮಳೆನೀರು ಶುದ್ಧ ನೀರೇ ಆದರೂ, ತಾರಸಿಯ ಮೇಲೆ ಬೀಳುವುದರಿಂದ ಅದು ಕಲುಷಿತವಾಗಿರಬಹುದು.

ಮರಳುಫಿಲ್ಟರ್

ಇರುವ ಎರಡು ವಿಧದ ಫಿಲ್ಟರ್‍ಗಳಲ್ಲಿ ಮಳೆ ನೀರು ಫಿಲ್ಟರ್ ಒಂದು . ಈ ಶೋಧಕವನ್ನು ಮನೆಯಲ್ಲಿಯೇ ಕಟ್ಟಿಕೊಳ್ಳಬಹುದು. ನೀರು ಸಂಗ್ರಹಾಲಯ ಟ್ಯಾಂಕುಗಳಲ್ಲಿ ಅಥವಾ ಸಂಪ್ ಇಲ್ಲವೆ ಡ್ರಮ್‍ಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ಮುನ್ನ, ಮಳೆನೀರನ್ನು ಶುದ್ಧೀಕರಿಸಬೇಕು. ಈ ಶುದ್ಧೀಕರಣಕ್ಕಾಗಿ ಮಳೆನೀರು ಹಲವು ಪದರಗಳಲ್ಲಿ ಹಾಯ್ದುಹೋಗುವಂತೆ ಮಾಡಬೇಕು. ಆ ಪದರಗಳೆಂದರೆ

  • ಜೆಲ್ಲಿ ಕಲ್ಲಿನ ಒಂದು ಪದರ
  • ಇದರ ಮೇಲೆ ದೊಡ್ಡ ಜೆಲ್ಲಿ ಕಲ್ಲುಗಳ ಮತ್ತೊಂದು ಪದರ
  • ಇದರ ಮೇಲೆ ಸಣ್ಣ ಜೆಲ್ಲಿ ಕಲ್ಲುಗಳ ಪದರ
  • ಇದರ ಮೇಲೆ ಇದ್ದಲಿನ ಪದರ
  • ಇದರ ಮೇಲೆ ದೊಡ್ಡ ಜೆಲ್ಲಿ ಕಲ್ಲುಗಳು
  • ಇದರ ಮೇಲೆ ಸಣ್ಣ ಜೆಲ್ಲಿ ಕಲ್ಲುಗಳು
  • ಈ ಕಲ್ಲಿನ ಪದರದ ಮೋಲೊಂದು ನೈಲಾನ್ ತೆರೆ
  • ಮತ್ತಿದರ ಮೇಲೆ ಮರಳಿನ ಪದರ.
  • ಹೀಗೆ ಈ ಮರಳು ಫಿಲ್ಟರ್ 8 ಪದರಗಳನ್ನೊಳಗೊಂಡಿರುತ್ತದೆ. ಈ 8 ಪದರಗಳಲ್ಲಿ ಹಾದು ಹೋಗುವ ಮಳೆನೀರು ಶುದ್ಧ ನೀರಾಗುತ್ತದೆ. ಹೀಗೆ ಶುದ್ದೀಕರಿಸಿದ ನೀರನ್ನು ಸಂಪ್, ಟ್ಯಾಂಕ್ ಅಥವಾ ಡ್ರಮ್‍ಗಳಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಈ ಪದರಗಳನ್ನು 5 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಇದ್ದಲಿನ ಪದರದ ಮುಖಾಂತರ ಮಳೆನೀರನ್ನು ಶುದ್ದೀಕರಿಸುವುದರಿಂದ, ಮಳೆನೀರಿನಲ್ಲಿ ಇದ್ದಿರಬಹುದಾದ ವಿಷಕಾರಿ ಮಲಿನಕಾರಕಗಳನ್ನು ತಡೆಯಬಹುದು.